ಅಕ್ಷರ್ ಬಾದಷಾ ಎಲ್ಲಿಯೇ ಹೋಗಲಿ, ಆತನ ಜತೆ ಬೀರಬಲ್ ಇದ್ದೇ ಇರುತ್ತಿದ್ದ.
ಒಂದು ಸಲ, ಇಬ್ಬರೂ ಬೇಟೆಯಾಡಲೆಂದು ಕಾಡಿಗೆ ಹೋಗಿದ್ದರು. ಅಡವಿಯಲ್ಲಿ ಅಲೆದಾಡಿ, ಬೇಟೆಯಾಡಿದರು. ಹಿಂತಿರುಗಿ ಬರುವಾಗ, ಊರ ಹೊರಗಿದ್ದ ಆಲದ ಮರದಡಿ ಕುಳಿತು, ವಿಶ್ರಮಿಸಿ ಕೊಳ್ಳುತ್ತಿದ್ದರು.
ಆ ಮರದ ತುಂಬ ಕಾಗೆಗಳಿದ್ದವು. ಅವುಗಳನ್ನು ನೋಡಿದ ಬಾದಷಾರಿಗೆ ಏನನಿಸಿತೋ,
“ಬೀರಬಲ್, ನಮ್ಮ ಸಾಮ್ರಾಜ್ಯದಲ್ಲಿ ಎಷ್ಟು ಕಾಗೆಗಳಿರಬಹುದು…? ನಿಖರವಾಗಿ ಹೇಳಬಲ್ಲೆಯಾ?” ಒಮ್ಮೆಲೆ ಕೇಳಿದರು.
ಬಾದಷಾರ ಈ ಅನಿರೀಕ್ಷಿತ ಪ್ರಶ್ನೆಗೆ ಒಂದಿಷ್ಟು ವಿಚಲಿತನಾಗದೆ, ಬೀರಬಲ್ ತಕ್ಷಣ ಉತ್ತರಿಸಿದ,
“ಮಹಾರಾಜ, ತಮ್ಮ ಸಾಮ್ರಾಜ್ಯದಲ್ಲಿರುವ ಒಟ್ಟು ಕಾಗೆಗಳ ಸಂಖ್ಯೆ ಮುವತ್ತು ಸಾವಿರದ ಆರು ನೂರಾ ಇಪ್ಪತ್ತಾರು.”
“ಅದೇನು ಅಷ್ಟು ಖಚಿತವಾಗಿ ಹೇಳುತ್ತೀಯಲ್ಲ? ಒಂದು ವೇಳೆ ಕಾಗೆಗಳ ಸಂಖ್ಯೆ ನೀನು ಹೇಳಿದುದಕ್ಕಿಂತ ಕಡಿಮೆಯಾಗಿದ್ದರೆ…?” ಕೇಳಿದರು ಬಾದಷಾ.
ಅದಕ್ಕೆ ಬೀರಬಲ್- “ಮಹಾರಾಜ, ಒಂದು ವೇಳೆ ಹಾಗೇನಾದರೂ ಆಗಿದ್ದರೆ… ಕಡಿಮೆ ಇದ್ದಷ್ಟು ಸಂಖ್ಯೆಯ ಕಾಗೆಗಳು, ತಮ್ಮ ಬಂಧು-ಬಾಂಧವರನ್ನು ಕಾಣಲು ಬೇರೆ ರಾಜ್ಯಕ್ಕೆ ಹೋಗಿರುತ್ತವೆ.”
“ಅಚ್ಛಾ…! ಹಾಗೇ ಅಂತ ಇಟ್ಟುಕೊಳ್ಳೋಣ. ಆದರೆ ಅವುಗಳ ಸಂಖ್ಯೆ ಹೆಚ್ಚಿದ್ದರೆ…?” ಮತ್ತೆ ಪ್ರಶ್ನಿಸಿದರು ಬಾದಷಾ.
ಆಗಲೂ ವಿಚಲಿತನಾಗದ ಬೀರಬಲ್ – “ಪ್ರಭು, ನಾನು ಹೇಳಿದುದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಕಾಗೆಗಳು ಇವೆ. ಅಷ್ಟು ಸಂಖ್ಯೆಯಲ್ಲಿ ಬೇರೆ ರಾಜ್ಯದ ಕಾಗೆಗಳು ತಮ್ಮ ಬಂಧು-ಬಾಂಧವರನ್ನು ಕಾಣಲು ಇಲ್ಲಿಗೆ ಬಂದಿರಲೂ ಬಹುದಲ್ಲವೆ…?” ನಗುತ್ತ ಹೇಳಿದಾಗ, ಆತನ ಜಾಣ್ಮಗೆ ಅಕ್ಟರ್ ಬಾದಷಾ ತಲೆದೂಗಿದ.