ಅವತ್ತು ಹುಣ್ಣಿಮೆ. ತಣ್ಣನೆಯ ಪ್ರಶಾಂತವಾದ ಚೇತೋಹಾರಿ ವಾತಾವರಣ. ಹಾಲು ಚೆಲ್ಲಿದಂತೆ ಎಲ್ಲೆಡೆ ಬೆಳದಿಂಗಳು ಬಿದ್ದುಕೊಂಡಿದೆ. ಆ ಸಮಯದಲ್ಲಿ ಅಕ್ಟರ್ ಬಾದಷಾ, ಅಂತಃಪುರದ ಮಾಳಿಗೆಯ ಮೇಲೆ ವಿಶ್ರಾಂತಿ ಪಡೆಯುತ್ತಿದ್ದಾನೆ.
ಗಗನದತ್ತ ದೃಷ್ಟಿ ಹರಿಸಿದ ಆತನಿಗೆ ಮಿನುಗುವ ತಾರೆಗಳು ಆಕರ್ಷಕವಾಗಿ ಕಾಣುತ್ತವೆ. ಗ್ರಹ, ನಕ್ಷತ್ರ, ಚಂದ್ರ ಎಲ್ಲವೂ ಆತನಿಗೆ ವಿಸ್ಮಯವಾಗಿ ಕಾಣುತ್ತವೆ. ಹಾಗೆಯೇ ದಿಂಬಿಗೆ ಬೆನ್ನು ಕೊಟ್ಟು ಕುಳಿತವನ ಆಲೋಚನಾ ಲಹರಿ ಎತ್ತಲೋ ಹರಿಯುತ್ತದೆ.
“ಈಗ ಎಲ್ಲ ಕಡೆ ಬೆಳದಿಂಗಳ ಹೊನಲ ಬೆಳಕು. ಹಗಲಿನಲ್ಲಿ ಸೂರ್ಯನ ಬೆಳಕು ಜಗತ್ತನ್ನೇ ಬೆಳಗುತ್ತದೆ. ಹಾಗಿದ್ದರೆ ಈ ಸೂರ್ಯ-ಚಂದ್ರರ ಬೆಳಕಿಗೆ ಮುಟ್ಟಲಾಗದ ವಸ್ತು ಯಾವುದಾದರೂ ಇದ್ದೀತೆ?” ಈ ವಿಚಾರ ಬಾದಷಾನ ತಲೆಯೊಳಗೆ ಕೊರೆಯತೊಡಗಿತು. ಬಹಳ ಹೊತ್ತು ಆಲೋಚಿಸುತ್ತಲೇ ಕುಂತ.
ಆತನ ತರ್ಕಕ್ಕೆ ಸರಿಯಾದ ಉತ್ತರ ಹೊಳೆಯಲೇ ಇಲ್ಲ. ಮರುದಿನದ ನಂತರ, ಆಸ್ಥಾನದಲ್ಲಿನ ವಿದ್ವಾಂಸರಿಗೆ ಕೇಳಬೇಕು ಅಂದುಕೊಂಡ.
“ನೋಡಿ, ಸೂರ್ಯ-ಚಂದ್ರರ ಬೆಳಕು ಕಾಣದ ವಸ್ತು ಯಾವುದಾದರೂ ಇದೆಯಾ? ಆಲೋಚನೆ ಹೇಳಿ” ಬಾದಷಾ ಕೇಳಿದ.
ದರ್ಬಾರ್ನ ಎಲ್ಲ ಪಂಡಿತರಿಗೆ ಈ ಪ್ರಶ್ನೆ ಜಟಿಲವಾಗಿ ಕಾಣಿಸಿತು. ಉತ್ತರ ಹೇಳಲು ಅವರೆಲ್ಲ ಪ್ರಯತ್ನಿಸಿದರಾದರೂ, ಅಕ್ಟರ್ಗೆ ತೃಪ್ತಿ ತರಲಿಲ್ಲ. ಕೆಲವಂತೂ ತೀರ ಹಾಸ್ಯಾಸ್ಪದ ಉತ್ತರಗಳಾಗಿದ್ದವು.
ರಾತ್ರಿಯಿಡೀ ಕಾಡುತ್ತಿದ್ದ ತನ್ನ ಪ್ರಶ್ನೆಗೆ ಉತ್ತರ ಸಿಗದೆ ಬಾದಷಾ ಮತ್ತಷ್ಟು ಖಿನ್ನನಾದ, “ಈಗ ಬೀರಬಲ್ ಇದ್ದಿದ್ದರೆ… ಖಂಡಿತವಾಗಿ ಆತನಿಂದ ಸರಿಯಾದ ಉತ್ತರ ಬಂದೇ ಬರುತ್ತಿತ್ತು” ನೂರೊಂದು ಅಂದುಕೊಂಡಿರಬೇಕು. ಮನಸ್ಸು ತಾಳದೆ, ಕೊನೆಗೆ ಸಲವಾದರೂ ಬೀರಬಲ್ನನ್ನು ಕರೆದುಕೊಂಡು ಬರುವಂತೆ ಅಪ್ಪಣೆ ಮಾಡಿದ.
ಬಾದಷಾರ ಬುಲಾವು ಬರುತ್ತಲೇ ಬೀರಬಲ್ ಓಡೋಡಿ ಬಂದ. ಅಕ್ಟರ್ನ ಹಾಗು ಸಭಾಸದರ ಮುಖ ಗಮನಿಸಿದ. “ಏನೋ ಒಂದು ಸಮಸ್ಯೆ ಉದ್ಭವಿಸಿದೆ” ಮನಸಿನಲ್ಲಿ ಊಹಿಸಿಕೊಂಡು,“ಏನಾಯಿತು ಮಹಾರಾಜ್ ?” ಕೇಳಿದ.
“ಬೀರಬಲ್, ಚಂದ್ರನ ಬೆಳಕು ಹಾಗು ಸೂರ್ಯನ ಬೆಳಕು ಕಾಣದ ವಸ್ತು ಯಾವುದು? ಎಂಬ ಈ ನನ್ನ ಪ್ರಶ್ನೆಗೆ ಇಲ್ಲಿರುವ ಯಾರಿಂದಲೂ ಸರಿಯಾದ ಉತ್ತರ ಬಂದಿಲ್ಲ… ನೀನಾದರೂ ಸರಿ ಉತ್ತರ ಹೇಳಬಲ್ಲೆಯಾ?” ತನ್ನ ಸಮಸ್ಯೆಯನ್ನು ಬೀರಬಲ್ನ ಮುಂದಿಟ್ಟ.
“ಇದೇನು ಅಂಥ ಜಟಿಲ ಸಮಸ್ಯೆ, ಜಹಾಂಪನಾ?” ಬೀರಬಲ್ ಮಂದಹಾಸ ಚೆಲ್ಲಿದ.
“ಓಹೋ! ಎಂಥ ಅಹಂಕಾರ ನೋಡಿ ಈತನದು…! ಇಂಥ ಜಟಿಲು ಪ್ರಶ್ನೆಯನ್ನು ಹೀಗೆ ಹಗುರವಾಗಿ ಪರಿಗಣಿಸಬಹುದೆ?” ದರ್ಬಾರದಲ್ಲಿದ್ದವರು ಗುಸುಗುಸು ಮಾತನಾಡಿಕೊಂಡರು.
“ಹೌದೆ? ಹಾಗಿದ್ದರೆ ಏನು ನಿನ್ನ ಉತ್ತರ ಹೇಳು… ಜಲ್ಲೀ ಹೇಳು” ಅಕ್ಷರ್ ಬಾದಷಾಗೆ ತಿಳಿಯುವ ಕುತೂಹಲ.
“ಮಹಾರಾಜ್, ಚಂದ್ರನ ಹಾಗು ಸೂರ್ಯನ ಬೆಳಕು ಕಾಣದ ವಸ್ತುವೆಂದರೆ… ಅದು ಅಂಧಃಕಾರ! ಕತ್ತಲೆಯ ಮೇಲೆ ಚಂದ್ರನ ಬೆಳಕು, ಸೂರ್ಯನ ಬೆಳಕು ಬೀಳಬಾರದು, ಅಷ್ಟೆ…” ಸಹಜವಾಗಿ ಬೀರಬಲ್ ಉತ್ತರಿಸಿದ್ದ.
“ವಾರೇವ್ವಾ..!” ಬಾದಷಾ ಸಂತೋಷದಿಂದ ಉದ್ಧರಿಸಿದ್ದ. ಅಂತೂ ತನ್ನ ಪ್ರಶ್ನೆಗೆ ಬೀರಬಲ್ನಿಂದ ಸರಿಯಾದ ಉತ್ತರ ಸಿಕ್ಕಿತಲ್ಲ ಎಂಬ ಸಮಾಧಾನ.